ಮೂಡಿಗೆರೆ: ತಾಲ್ಲೂಕು, ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಒ ಮತ್ತು ಅಧ್ಯಕ್ಷರ ಜನವಿರೋಧಿ ಸರ್ವಾಧಿಕಾರಿ ಆಡಳಿತ ವಿರೋಧಿಸಿ ಅದೇ ಪಂಚಾಯಿತಿ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ನಡೆಸಿದ ಘಟನೆ ನಡೆಯಿತು.
ಐದು ಸದಸ್ಯರಿರುವ ಗ್ರಾಮ ಪಂಚಾಯಿತಿಯಲ್ಲಿ ಮೂರು ಸದಸ್ಯರು ವಿವಿಧ ಬೇಡಿಕೆಗಳಾದ ವಸತಿ ಮತ್ತು ನಿವೇಶನ ತಯಾರಿಸದಿರುವ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನ ದುರ್ಬಳಕೆ, ಹದಿನೈದನೇ ಹಣಕಾಸು ಯೋಜನೆಯ ನಿಯಮ ಉಲ್ಲಂಘನೆ, ವರ್ಗ–1ರ ಹಣ ದುರುಪಯೋಗ, ನರೇಗಾ ಯೋಜನೆಯಡಿ ಜನರ ಬೇಡಿಕೆ ಮತ್ತು ವಸತಿ ಇರದ ಕಡೆ ರಸ್ತೆ ಬಾಕ್ಸ್ ಚರಂಡಿ, ಈ ಸ್ವತ್ತು ವಿನಲ್ಲಿ ಅವ್ಯವಹಾರ ಹಾಗೂ ಇನ್ನಿತರೆ ಬೇಡಿಕೆಗಳನ್ನಿಟ್ಟು ಸದಸ್ಯರಾದ ಶಿವಪ್ರಸಾದ್ ಬಿ.ಇ., ಸುನೀತ ಬಿ.ಟಿ.ಉಪಾಧ್ಯಕ್ಷರಾದ ನಾಟ್ಯ ರಂಜಿತ್ ಧರಣಿ ನಡೆಸಿದರು.
ಧರಣಿಯಲ್ಲಿ ರವಿಶಂಕರ್, ಬಿ.ಡಿ ರವಿ, ಕೆ.ಪಿ.ರಾಜು, ಸುಧಾಕರ್, ಜಯಕುಮಾರ್, ರಮೇಶ್ ಪೂಜಾರಿ, ಧನಂಜಯ್, ಜಿತೇಂದ್ರ, ಪ್ರಜ್ವಲ್, ಕೇಶವ್, ಸಂತೋಷ್ ಹೊಕ್ಕಳ್ಳಿ ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

