ಗಾಝಾದಲ್ಲಿ ಇಸ್ರೇಲ್ ನಡೆಸ್ತಾ ಇರುವ ಕ್ರೌರ್ಯವನ್ನು ಪದೇ ಪದೇ ಖಂಡಿಸುತ್ತಿರುವ ಪೋಪ್ ಫ್ರಾನ್ಸಿಸ್ ಮಾರ್ ಪಾಪ ಅವರ ಬಗ್ಗೆ ಇಸ್ರೇಲ್ ಗರಂ ಆಗಿದೆ. ಜೆರುಸೆಲಂನಲ್ಲಿರುವ ವ್ಯಾಟಿಕನ್ ಪ್ರತಿನಿಧಿಯನ್ನು ಕರೆಸಿಕೊಂಡು ತನ್ನ ಅಸಮಾಧಾನವನ್ನು ಸೂಚಿಸಿದೆ.
ಕ್ರಿಸ್ಮಸ್ ದಿನದಂದು ರೋಮ್ ನ ಸೇಂಟ್ ಪೀಟರ್ಸ್ ಬ್ಯಾಸಿಲಕದಲ್ಲಿ ನಡೆಸಿದ ಭಾಷಣದಲ್ಲಿ ಮತ್ತು ಕಳೆದ ಕೆಲವು ದಿನಗಳಿಂದ ನೀಡಿದ ವಾರ್ಷಿಕ ಭಾಷಣಗಳಲ್ಲಿ ಇಸ್ರೇಲ್ ನ ವಿರುದ್ಧ ಪೋಪ್ ಅವರು ಪ್ರಬಲ ಟೀಕೆ ವ್ಯಕ್ತಪಡಿಸಿದ್ದರು.
ಗಾಝಾದಲ್ಲಿ ಯುದ್ಧ ವಿರಾಮ ಕೈಗೊಳ್ಳಬೇಕು ಮತ್ತು ಒತ್ತೆಯಾಳುಗಳ ಬಿಡುಗಡೆ ನಡೆಯಬೇಕು ಎಂದವರು ಒತ್ತಾಯಿಸಿದ್ದರು. ಗಾಝಾದಲ್ಲಿರುವ ಕ್ರೈಸ್ತರ ಬಗ್ಗೆ ತನಗೆ ಅತೀವ ಚಿಂತೆಯಾಗಿದೆ, ಕದನ ವಿರಾಮ ಜಾರಿಯಾಗಲಿ. ಒತ್ತೆಯಾಳುಗಳ ಬಿಡುಗಡೆಯಾಗಲಿ. ಹಾಗೆಯೇ ಹಸಿವಿನಿಂದ ಮತ್ತು ಯುದ್ಧ ಕಾರಣದಿಂದ ಸಂಕಷ್ಟದಲ್ಲಿರುವ ಗಾಝಾದ ಮಂದಿಗೆ ನೆರವಾಗುವುದಕ್ಕೆ ಎಲ್ಲರೂ ಮುಂದಾಗೋಣ ಎಂದವರು ಹೇಳಿದ್ದರು. ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯ ವಿರುದ್ಧ ಕೂಡ ಅವರು ನಿರ್ದಿಷ್ಟವಾಗಿ ಉಲ್ಲೇಖಿಸಿಯೇ ಖಂಡಿಸಿದ್ದರು.

