ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬ: ದಯಾಮರಣಕ್ಕೆ ಆಗ್ರಹ

ಭಾಸ್ಕರ ಪತ್ರಿಕೆ
0

ತಿಪಟೂರು: ತಾಲೂಕಿನಲ್ಲಿ ದಿನ ಕಳೆದಂತೆ ಒಂದೊಂದೇ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಅದಕ್ಕೆ ತಾಜಾ ಉದಾಹರಣೆ ಎಂಬಂತೆ ತಿಪಟೂರು ತಾಲೂಕು ವನವಳ್ಳಿ ಹೋಬಳಿ ಹನುಮಂತಪುರ ಗ್ರಾಮದ ಸರ್ವೆ ನಂಬರ್ 23/7ರಲ್ಲಿ ಸುಮಾರು 3 ಎಕರೆ ಜಮೀನನ್ನು ಈ ಹಿಂದೆ ಸರ್ಕಾರವು 1979ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಈರಮ್ಮ ಕೋಂ ವೆಂಕಟರಾಮಯ್ಯ ಎಂಬವರ ಹೆಸರಿಗೆ ಮಂಜೂರು ಮಾಡಿದ್ದು, ಸದರಿ ಜಮೀನು ಇದೀಗ ಮೂಲ ಖಾತೆದಾರರ ಹೆಸರಿನಲ್ಲಿ ಇರುವಾಗಲೇ ಆ ಜಮೀನಿನಲ್ಲಿ ಸವರ್ಣೀಯರು ಜಮೀನನ್ನು ಕಬಳಿಕೆ ಮಾಡಿಕೊಂಡು ಇದೇ ಜಾಗದಲ್ಲೇ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಹಾಗೂ ತಮ್ಮದೇ ಆದಂತಹ ಸ್ವಂತ ಮನೆಯನ್ನು ಕಟ್ಟಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಹಿಂದೆ ಹಲವಾರು ಬಾರಿ ಜಮೀನಿನ ಮಾಲೀಕರ ಮಕ್ಕಳು ತಮ್ಮ ಜಮೀನನ್ನು ಬಿಟ್ಟು ಕೊಡುವಂತೆ ಅನೇಕ ಬಾರಿ ಮನವಿ ಮಾಡಿದರು ಯಾವುದೇ ಜಮೀನನ್ನು ಹಿಂತಿರುಗಿಸದೆ ದಲಿತರ ಮೇಲಿನ ದೌರ್ಜನ್ಯವನ್ನು ಮುಂದುವರಿಸಿದ್ದಾರೆ.

ಸಿದ್ದಪ್ಪ ಎಂಬುವರು ಈಗಾಗಲೇ ಜಮೀನು ನಮ್ಮದೇ ಎಂದು ಈಗಾಗಲೇ ಅನೇಕ ಬಾರಿ ಕೋರ್ಟಿಗೆ ಹೋಗಿದ್ದರು, ಕೋರ್ಟ್ ಇವರ ವಾದವನ್ನು ತಳ್ಳಿ  ಹಾಕಿರುವಂತೆ ಕಂಡು ಬರುತ್ತಿದೆ.

1979ರಲ್ಲಿ  ಈ ಜಮೀನು ಪಿ ಟಿ ಸಿ ಎಲ್   ನಿಯಮದಡಿ 5/1 ಬಿ ಅನ್ವಯ ಪರಿಶಿಷ್ಟ ಜಾತಿಗೆ ಮಂಜೂರಾದ ಈ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆಯವರು ಪಡೆಯಲು ಅಥವಾ ಮಾರಲು ಸಾಧ್ಯವಾಗುವುದಿಲ್ಲ ಹಾಗೂ ಈ ಕುಟುಂಬದ ಬಡ ಹೆಣ್ಣು ಮಕ್ಕಳು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಒಂದು ವೇಳೆ ಇದೇ ರೀತಿ ಜಮೀನಿನಿಂದ ನಮಗೆ ದೌರ್ಜನ್ಯ ಎಸಗಿದರೆ  ಸರ್ಕಾರವೇ ದಯಾಮರಣವನ್ನು ಕಲ್ಪಿಸಿ ಕೊಡಬೇಕೆಂದು ಜಮೀನಿನ ಮಾಲೀಕರಾದ ಎಲ್ಲಮ್ಮ ಹಾಗೂ ಸಹೋದರಿಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಳಲು ತೋಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಅಂಜನಪ್ಪ,  ತಿಪಟೂರು ತಾಲೂಕಿನಲ್ಲಿ ಈಗಾಗಲೇ ಇಂತಹ ಹಲವಾರು ಘಟನೆಗಳು ನಡೆಯುತ್ತಿದ್ದು, ಸರ್ಕಾರವು ಈ ಕೂಡಲೇ ಇಂತಹ ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಸೂಕ್ತವಾದಂತಹ ನ್ಯಾಯವನ್ನು ಒದಗಿಸಿ ಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಒಂದು ವೇಳೆ ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಮರುಕಳಿಸಿದರೆ ತಾಲೂಕು ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಇದೇ ವೇಳೆ ಅವರು ಎಚ್ಚರಿಕೆ ನೀಡಿದರು.

ಈಗಾಗಲೇ ಈ ವಿಚಾರವನ್ನು  ಮುಖ್ಯಮಂತ್ರಿಗಳು ಗೃಹ ಸಚಿವರು ಪರಿಶಿಷ್ಟ ಜಾತಿಯ ಆಯೋಗ ಜಿಲ್ಲಾಧಿಕಾರಿ ಹಾಗೂ ಕಂದಾಯ ಸಚಿವರಿಗೂ ಕೂಡ ತಿಳಿಸಲಾಗಿದ್ದು,  ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಇದೇ ವೇಳೆ ಅವರು ತಾಲೂಕು ತಹಸಿಲ್ದಾರ್ ಜಗನ್ನಾಥ್ ರವರಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ ತಾಲೂಕು ಉಪಾಧ್ಯಕ್ಷ ರೇಣುಕ್ ಮೂರ್ತಿ,  ಭಾಗ್ಯಮ್ಮ, ನಾಗಮ್ಮ ಎಲ್ಲಮ್ಮ, ಸುಮನ್ ಮೊದಲಾದವರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*