ಕರ್ನಾಟಕ ಸರ್ವೋದಯ ಮಂಡಲ ರಾಷ್ಟ್ರೀಯ ಸಮ್ಮೇಳನ ಮತ್ತು ಹುತಾತ್ಮರ ದಿನಾಚರಣೆ

ಭಾಸ್ಕರ ಪತ್ರಿಕೆ
0



ಶಿಕಾರಿಪುರ: ದಿನಾಂಕ ೨೯, ೩೦ - ೦೧ - ೨೦೨೫ ರಂದು ಸರ್ವೋದಯ ರಾಷ್ಟ್ರೀಯ ಸಮ್ಮೇಳನವನ್ನು ಸ್ವಾತಂತ್ರ್ಯ ಹೋರಾಟಗಾರರ ನೆಲೆಬೀಡು, ತ್ಯಾಗ, ಬಲಿದಾನಗಳ ಕೇಂದ್ರವಾಗಿದ್ದ ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ತಿಪಟೂರು ತಾಲೂಕು ಸರ್ವೋದಯ ಮಂಡಲದ ವತಿಯಿಂದ ಅಧ್ಯಕ್ಷರಾದ ಶ್ರೀಮತಿ ಶೋಭಾ ಜಯದೇವ್ ರವರ ನೇತೃತ್ವದಲ್ಲಿ ಇಪ್ಪತ್ತು ಸರ್ವೋದಯ ಬಂಧುಗಳು ಭಾಗವಹಿಸಿದ್ದರು. ಅದರಲ್ಲೂ ಹದಿನಾಲ್ಕು ಮಹಿಳೆಯರೇ ಇದ್ದದ್ದು ವಿಶೇಷವಾಗಿತ್ತು.

ದಿನಾಂಕ ೨೯ ರಂದು ಮಧ್ಯಾಹ್ನ ಒಂದು ಗಂಟೆಗೆ ತಲುಪಿದ ತಂಡಕ್ಕೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಶ್ರೀ ಬಸವರಾಜಪ್ಪ ತಂಡದವರಿಂದ ಹೃದಯಪೂರ್ವಕ ಸ್ವಾಗತ ಅವರೇ ವ್ಯವಸ್ಥೆ ಮಾಡಿದ ಸುಸಜ್ಜಿತ ಬಸ್ ನಲ್ಲಿ ಪ್ರಯಾಣಿಸಿ ಸಮೀಪದ ಕಲ್ಯಾಣ ಮಂಟಪದಲ್ಲಿ ಉತ್ತಮ ಭೋಜನ ಮಾಡಿ ಸಂಜೆ  ಈಸೂರಿಗೆ ತಲುಪಿದೆವು.

ಇತ್ತೀಚೆಗೆ ನಿರ್ಮಾಣವಾಗಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಆಕರ್ಷಕವಾಗಿದೆ. ಹೋರಾಟದಲ್ಲಿ ಬಲಿದಾನಗೈದ ಬಿ. ಮಲ್ಲಪ್ಪ, ಸೂರ್ಯನಾರಾಯಣ, ಗುರಪ್ಪ, ಹಾಲಪ್ಪ, ಗೌಡರ ಶಂಕರಪ್ಪ ಇವರ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದಿದ್ದ ಲೋಕ ಸೇವಕರಿಗೆ ಈಸೂರಿನ ಸ್ವಾತಂತ್ರ ಹೋರಾಟದ ವಿವರವನ್ನು ಶ್ರೀ ಹೆಚ್.ಎಸ್. ಮಂಜಪ್ಪ ನೀಡಿದರು. ಸಂಜೆ ಗ್ರಾಮದ ಜಿ. ಎಸ್. ಶಿವರುದ್ರಪ್ಪ ಬಯಲು ರಂಗಮಂದಿರದಲ್ಲಿ ಗಾಂಧಿಯವರ ನನ್ನ ಸತ್ಯಾನ್ವೇಷಣೆ ಕೃತಿಯಿಂದ ಪ್ರಭಾವಿತನಾಗಿ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ತುಕಾರಾಂ ಗೋಲೆಯವರ ಆತ್ಮಕಥೆ ಆಧಾರಿತ ನಾಟಕ ಪ್ರದರ್ಶನ ಔಚಿತ್ಯ ಪೂರ್ಣವಾಗಿತ್ತು. ಕಾಂತೇಶ ಕದರಮಂಡಲಗಿಯವರ ನಿರ್ಧೇಶನದಲ್ಲಿ ಹಲವಾರು ಇತಿಮಿತಿಗಳ ಮಧ್ಯೆಯೂ ಜನರಿಗೆ ಗಾಂಧಿ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು.

 ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ಸಭಾ ಕಾರ್ಯಕ್ರಮ ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷರಾದ ಶ್ರೀ ಹೆಚ್. ಎಸ್. ಸುರೇಶ್ ರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾಗಿ ಭಾರತ ಸರ್ವೋದಯ ಮಂಡಲ ಅಧ್ಯಕ್ಷರಾದ ಶ್ರೀ ಚಂದನ್ ಪಾಲ್, ತುಕಾರಾಂ ಬೋಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರೇಖಾ ಇನ್ನಿತರರು ಉಪಸ್ಥಿತರಿದ್ದರು. ಹನ್ನೊಂದು ಗಂಟೆಗೆ ಮಹಾತ್ಮ ಗಾಂಧಿಯವರ ಬಲಿದಾನದ ಪ್ರಯುಕ್ತ ಎರಡು ನಿಮಿಷಗಳ ಮೌನ ಆಚರಿಸಲಾಯಿತು. ಸಮಾವೇಶಕ್ಕೆ ದುಡಿದ ಹಲವಾರಿಗೆ ಸನ್ಮಾನ ಮಾಡಲಾಯಿತು. ರಾಜ್ಯಾಧ್ಯಕ್ಷರಾದ ಸುರೇಶ್ ರವರು ಸರ್ವೋದಯ ಮಂಡಲದ ಉದ್ದೇಶ, ಚಟುವಟಿಕೆಗಳ ಬಗ್ಗೆ ತಿಳಿಸಿದರು. ಅಧ್ಯಕ್ಷ ಭಾಷಣ ಮಾಡಿದ ಚಂದನ್ ಪಾಲ್ ರವರು ಸ್ವಾತಂತ್ರ್ಯಾನಂತರ ಗಾಂಧಿಯವರ ಮೌಲ್ಯಗಳು ತೆರೆಮರೆಗೆ ಸರಿದು ಹೋಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.  ಸಭೆಯಲ್ಲಿ ನಮ್ಮ ತಾಲೂಕಿನ ಸರ್ವೋದಯ ಮಂಡಲದ ಅಧ್ಯಕ್ಷರು ಹಿಂದಿ ದೇಶಭಕ್ತಿ ಗೀತೆ ಯನ್ನು ಸುಶ್ರಾವ್ಯವಾಗಿ ಹಾಡಿದರು.

ಸದಸ್ಯರಿಗೆ ಇದೊಂದು ಚೇತೋಹಾರಿ ಪ್ರವಾಸವಾಗಿ ಎಲ್ಲರೂ ಖುಷಿ, ಖುಷಿಯಾಗಿ ಭಾಗವಹಿಸಿದ್ದಕ್ಕಾಗಿ ತಾಲೂಕು ಸರ್ವೋದಯ ಮಂಡಲದ ಪರವಾಗಿ ಅಧ್ಯಕ್ಷರಾದ ಶ್ರೀಮತಿ ಶೋಭಾಜಯದೇವ್ ರವರು ಶ್ರೀ ಡಿ.ಎಸ್. ಮರುಳಪ್ಪ, ಹೆಚ್.ಎಸ್. ಮಂಜಪ್ಪ, ಶ್ರೀಮತಿ ಶುಭ ವಿಶ್ವಕರ್ಮ, ಶ್ರೀ ಓಂಕಾರಮೂರ್ತಿ, ಶ್ರೀ ವೀರಪ್ಪ ಅಂಗಡಿ, ಶ್ರೀಮತಿ ಶಾರದಮ್ಮ ಮತ್ತು ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*