ಹುಣಸೂರು: ಹಾಡಹಗಲೇ ವೃದ್ಧ ದಂಪತಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಡಪ್ಪನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿ(65) ಹಾಗೂ ಇವರ ಪತ್ನಿ ಶಾಂತಮ್ಮ(52) ಹತ್ಯೆಗೀಡಾದವರಾಗಿದ್ದಾರೆ. ಇವರಿಬ್ಬರು ತೋಟದ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ.
ಸೋಮವಾರ ಸಂಜೆ 4 ಗಂಟೆಯ ಸುಮಾರಿಗೆ ಮೃತರ ಪುತ್ರ ದೇವರಾಜ್ ಎಂಬವರು ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದರು. ಈ ವೇಳೆ ಶುಂಠಿಯನ್ನು ತುಂಬಲು ಬುಟ್ಟಿ ತರುವಂತೆ ಕಾರ್ಮಿಕ ಗಣೇಶ ಎಂಬಾತನನ್ನು ತಂದೆ ರಂಗೇ ಗೌಡ ಅವರ ತೋಟದ ಮನೆಗೆ ಕಳುಹಿಸಿದ್ದರು. ಬುಟ್ಟಿ ತರಲು ಗಣೇಶ್ ಮನೆಗೆ ಹೋದ ವೇಳೆ ಮನೆಯೊಳಗೆ ಶಾಂತಮ್ಮ ಹಾಗೂ ದನದ ಕೊಟ್ಟಿಗೆಯಲ್ಲಿ ರಂಗಸ್ವಾಮಿ ಗೌಡ ರಕ್ತದ ಮಡುವಲ್ಲಿ ಬಿದ್ದಿದ್ದರು. ತಕ್ಷಣವೇ ಈ ಬಗ್ಗೆ ಮಗ ದೇವರಾಜ್ ಗೆ ಕಾರ್ಮಿಕ ಮಾಹಿತಿ ನೀಡಿದ್ದಾರೆ.
ಪುತ್ರ ದೇವರಾಜ್ ಸ್ಥಳಕ್ಕೆ ಬಂದು ನೋಡಿದ ವೇಳೆ ಇಬ್ಬರೂ ಮೃತಪಟ್ಟಿದ್ದರು. ತಕ್ಷಣವೇ ದೇವರಾಜ್ ಬಿಳಿಕೆರೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಇನ್ಸ್ ಪೆಕ್ಟರ್ ಲೋಲಾಕ್ಷಿ, ಡಿವೈಎಸ್ ಪಿ ಗೋಪಾಲ ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಂತ್ರಜ್ಞರ ತಂಡವೂ ಪರಿಶೀಲನೆ ನಡೆಸಿದೆ.
from Mahanayaka https://ift.tt/YWQVHil

