ಕಲಬುರಗಿ/ರಾಯಚೂರು: ಇರಾನ್ ಕೆಲವು ನಿರ್ಣಾಯಕ ಸಮಯದಲ್ಲಿ ಭಾರತವನ್ನು ಬೆಂಬಲಿಸಿದ್ದು, ಕಚ್ಚಾ ತೈಲದ ಶೇಕಡಾ 50 ರಷ್ಟು ಇರಾನ್ ನಿಂದ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇರಾನ್–ಇಸ್ರೇಲ್ ಯುದ್ಧದಲ್ಲಿ ಭಾರತ ಸರ್ಕಾರ ಇರಾನ್ ರಾಷ್ಟ್ರವನ್ನು ಬೆಂಬಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇರಾನ್ –ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಅಮೆರಿಕಾ ಇಸ್ರೇಲ್ ಪರ ಮಧ್ಯ ಪ್ರವೇಶಿಸಿ ಯುದ್ಧಕ್ಕೆ ಇಳಿದಿದೆ. ವಿಶ್ವದಾದ್ಯಂತ ಯುದ್ಧ ನಡೆದರೆ ಪ್ರಪಂಚದಲ್ಲಿ ಅಶಾಂತಿ ಸೃಷ್ಠಿಯಾಗುತ್ತದೆ. ಯುದ್ಧಬೇಡವೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈಗಾಗಲೇ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ವಿಶ್ವ ಗುರು ಎಂದು ಪ್ರಚಾರ ಪಡೆಯುವ ದೇಶದ ಪ್ರಧಾನಿ ಮೋದಿಯವರು, ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡುವುದರಿಂದ ಹಾಗೂ ಅನೇಕ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆಂದು ಹೇಳಲಾಗುವುದರಿಂದ, ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸಬೇಕೆಂದು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ, ಮೋದಿ ಅಮೆರಿಕಕ್ಕೆ ಹೋಗಿ ‘ಫಿರ್ ಏಕ್ ಬಾರ್ ಟ್ರಂಪ್ ಸರ್ಕಾರ್’ ಎಂಬ ಘೋಷಣೆ ಕೂಗಿದ್ದರು. ಡೊನಾಲ್ಡ್ ಟ್ರಂಪ್ ಪರ ಮತ ಚಲಾಯಿಸುವಂತೆ ಭಾರತೀಯರನ್ನು ಒತ್ತಾಯಿಸಿದ್ದರು, ಆದರೆ, ಇದರ ಪ್ರತಿಯಾಗಿ, ಟ್ರಂಪ್ ಭಾರತಕ್ಕಾಗಿ ಏನನ್ನೂ ಮಾಡಿಲಿಲ್ಲ. ಹಲವಾರು ತೆರಿಗೆಗಳನ್ನು ಭಾರತಕ್ಕೇ ವಿಧಿಸಿದ್ದಾರೆಂದು ತಿಳಿಸಿದರು.

