ಕೊರಟಗೆರೆ: ಶಿಕ್ಷಣವೇ ಜೀವನವನ್ನು ರೂಪಿಸುವ ಶಕ್ತಿಯಾಗಿದೆ. ವಿದ್ಯೆಯಿಂದ ವ್ಯಕ್ತಿಯ ಚಿಂತನೆ, ನಡೆ–ನುಡಿ ಎಲ್ಲವೂ ಬದಲಾಗುತ್ತದೆ. ಆದ್ದರಿಂದ ನಾವು ಶಿಕ್ಷಣ ಪಡೆದವರಾಗಿಯೂ, ಸಂಸ್ಕಾರವಂತರಾಗಿಯೂ ಬದುಕುವುದನ್ನು ಕಲಿಯಬೇಕು ಎಂದು ಬೆಂಗಳೂರಿನ ಬೇಲಿ ಮಠದ ಪೀಠಾಧ್ಯಕ್ಷ ಶಿವರುದ್ರ ಮಹಾ ಸ್ವಾಮೀಜಿ ಹೇಳಿದರು.
ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಸಂಸ್ಕಾರ ಶಿಬಿರದಲ್ಲಿ ಶುಕ್ರವಾರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮಲ್ಲಿರುವ ಸಂಪತ್ತೆಲ್ಲವೂ ಕಳೆದುಹೋಗಬಹುದು. ಆದರೆ ನಾವು ಕಲಿತ ವಿದ್ಯೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹಣವಂತರಿಗಿಂತ ಗುಣವಂತರಿಗೆ ಮತ್ತು ಜ್ಞಾನಿಗಳಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ದೊರಕುತ್ತದೆ” ಎಂದು ಹೇಳಿದರು.
ಶಿಬಿರದ ವೈಶಿಷ್ಟ್ಯವನ್ನು ವಿವರಿಸಿದ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ, ಇಲ್ಲಿ ಭಾಗವಹಿಸಿರುವ ಮಕ್ಕಳು ಮೊಬೈಲ್ ಮತ್ತು ಟಿವಿಗಳಿಂದ ದೂರವಿದ್ದು, ಜಂಕ್ ಫುಡ್ ಸೇರಿದಂತೆ ಆರೋಗ್ಯಕ್ಕೆ ಹಾನಿಕರ ಆಹಾರ ಪದಾರ್ಥಗಳನ್ನು ತ್ಯಜಿಸಿ, ಮಠದಲ್ಲಿ ನೀಡುವ ಸಾತ್ವಿಕ ಆಹಾರವನ್ನು ಸೇವಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಸಂಸ್ಕಾರ ಬೆಳೆದಂತೆ ಮೌಲ್ಯವೂ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಗಣೇಶ್, ಮುಖಂಡರಾದ ಚಂದ್ರಪ್ಪ, ರಾಜಣ್ಣ, ವೇಣು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
The post ಶಿಕ್ಷಣ ಜೀವನವನ್ನು ರೂಪಿಸುವ ಶಕ್ತಿ: ಶಿವರುದ್ರ ಮಹಾ ಸ್ವಾಮೀಜಿ appeared first on nammatumakuru.
from nammatumakuru https://ift.tt/RwUZYsV
