ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವರ ಗ್ರಾಮದಲ್ಲಿ ತಡರಾತ್ರಿ ಕುರಿ ಶೆಡ್ ಗೆ ಚಿರತೆ ದಾಳಿ ಹತ್ತಕ್ಕೂ ಹೆಚ್ಚು ಕುರಿ ಬಲಿ ಮತ್ತು 5 ಕುರಿಗಳಿಗೆ ಗಾಯವಾಗಿದ್ದು ಶಿವರ ಗ್ರಾಮದ ರೈತ ಎಸ್ ಆರ್ ರಾಜಶೇಖರ್ ಬಿನ್ ಲೇಟ್ ರಂಗರಾಮಯ್ಯ ಎಂಬವರಿಗೆ ಸೇರಿದ ಕುರಿಗಳು ಘಟನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಪರಿಶೀಲಿಸಿ, ಚಿರತೆಯ ದಾಳಿಯಿಂದಾಗಿಯೇ ಮೇಕೆಗಳು ಸಾವನ್ನಪ್ಪಿವೆ ಎಂಬುದಾಗಿ ತಿಳಿಸಿದ್ದಾರೆ.
ಮೃತಪಟ್ಟಿರುವ ಮೇಕೆಗಳ ಕತ್ತಿನ ಭಾಗದಲ್ಲಿ ಕೋರೆಹಲ್ಲುಗಳಿಂದ ಕಚ್ಚಿದ ಆಳವಾದ ಗಾಯಗಳಾಗಿದ್ದು, ಮೈಮೇಲೂ ಉಗುರಿನಿಂದ ತರಚಿದ ರೀತಿಯಲ್ಲಿ ಆಳವಾದ ಗಾಯಗಳಾಗಿವೆ. ಸತ್ತ ಮೇಕೆಗಳ ದೇಹದಿಂದ ರಕ್ತ ಸೋರುತ್ತಿದ್ದು, ರಾತ್ರಿ ಸಮಯದಲ್ಲಿ ಚಿರತೆ ದಾಳಿ ನಡೆದಿದೆ ಎನ್ನಲಾಗಿದೆ, ರೈತ ರಾಜಶೇಖರ್ ಅವರು ಕುರಿಗಳನ್ನು ಸಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.ಈಗ ಕುರಿಗಳು ಸಾವನ್ನಪ್ಪಿರುವುದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಅವರಿಗೆ ದಿಕ್ಕು ತೋಚದಂತಾಗಿದೆ.
ಅರಣ್ಯ ಇಲಾಖೆ ಸಂಕಷ್ಟಕ್ಕೆ ಸಿಲುಕಿರುವ ರಾಜಶೇಖರ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನೂ ಗುರುಗದಹಳ್ಳಿ ಶಿವರ ಗ್ರಾಮದ ಅಕ್ಕಪಕ್ಕ ರಸ್ತೆಯಲ್ಲಿ ಜನರು ಸಂಚರಿಸಲು ಭಯ ಪಡುವಂತಾಗಿದೆ. ದನ ಕರುಗಳನ್ನು ಮೇಯಿಸುವವರು ಮತ್ತು ಜಮೀನಿಗೆ ತೆರಳುವವರು ಈಗ ಆತಂಕಕ್ಕೆ ಒಳಗಾಗಿದ್ದಾರೆ.
ಹಾಗಾಗಿ ಚಿರತೆಗಳನ್ನು ಬೋನು ಇರಿಸಿ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
