ತಿಪಟೂರು: ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಎಂಟು ಭಾಗಗಳಲ್ಲಿ ಹಿಂದೂ ಸಮಾಜೋತ್ಸವವನ್ನು ಮಾಡಲಾಗುತ್ತಿದ್ದು, ಫೆ.9ರಂದು ಸೋಮವಾರ ಹಿಂದೂ ಸಮಾಜೋತ್ಸವ ಸಮಿತಿ ಶ್ರೀವಿವೇಕಾನಂದ ವಸತಿ ವತಿಯಿಂದ ಹಿಂದೂ ಸಮಾಜೋತ್ಸವವನ್ನು ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಹಿಂದೂ ಸಮಾಜೋತ್ಸವ ಸಮಿತಿ ಮುಖಂಡರಾದ ಲೋಕೇಶ್ವರ್ ಹೇಳಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಫೆ.9 ರ ಸೋಮವಾರ ಸಂಜೆ 4:30ಕ್ಕೆ ನಗರದ ಗ್ರಾಮ ದೇವತೆ ಶ್ರೀಕೆಂಪಮ್ಮ ದೇವಿ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಲಿದೆ. ಶೋಭಾಯಾತ್ರೆಯಲ್ಲಿ ಬಸವ, ಶ್ರೀವೀರಭದ್ರ, ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ, ಶ್ರೀಕಲ್ಲೇಶ್ವರ ಸ್ವಾಮಿ, ಶ್ರೀಚಿಕ್ಕಮ್ಮ ದೇವಿ ಹಾಗೂ ಭಾರತಾಂಬೆಯ ಚಿತ್ರಪಟಗಳು ಮೆರವಣಿಗೆಯಲ್ಲಿ ಸಾಗಲಿದೆ. ಸುಮಾರು ಒಂದೂವರೆ ಸಾವಿರ ಹಿಂದೂ ಸಮಾಜ ಬಾಂಧವರು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ದೊಡ್ಡಪೇಟೆ, ಕೋಡಿ ಸರ್ಕಲ್, ಅರಳಿಕಟ್ಟೆ, ಸಿಂಗ್ರಿ ನಂಜಪ್ಪ ವೃತ್ತ ಹಾಗೂ ಬಸ್ ನಿಲ್ದಾಣದಿಂದ ಪುನಃ ಬಿ.ಎಚ್.ರಸ್ತೆ ಮಾರ್ಗವಾಗಿ ಗ್ರಾಮ ದೇವತೆ ಶ್ರೀಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಶೋಭಾಯಾತ್ರೆ ಸಾಗುವ ದಾರಿಯಲ್ಲಿ ಮಾತೆಯರು ನೀರನ್ನು ಹಾಕಿ ರಂಗೋಲಿಯಿಂದ ಅಲಂಕರಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಮಕ್ಕಳು ಮಹಾಪುರುಷರ ವೇಷಗಳನ್ನು ಹಾಕಿ ಅಲಂಕರಿಸಿಕೊಂಡು ಬಂದು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಕೆರಗೋಡಿ ರಂಗಾಪುರ ಸುಕ್ಷೇತ್ರ ಅಧ್ಯಕ್ಷರಾದ ಶ್ರೀಗುರು ಪರದೇಶಿಕಂದ್ರ ಮಹಾಸ್ವಾಮೀಜಿಯವರು ಹಾಗೂ ಸಿಡ್ಡೆಹಳ್ಳಿ ಮಹಾ ಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದ ಶ್ರೀಇಮ್ಮಡಿ ಕರಿಬಸವ ದೇಶಿ ಕೇಂದ್ರ ಮಹಾಸ್ವಾಮಿಜಿಯವರು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ವಿದ್ಯಾರ್ಥಿ ಪರಿಷತ್ ಮುಖಂಡರಾದ ಮಾಚೇನಹಳ್ಳಿ ಪೃಥ್ವಿ ಕುಮಾರ್, ಲಕ್ಷ್ಮೀ ಸತ್ಯನಾರಾಯಣ ರವರು ಸಮಾಜೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ.
ಓಹಿಲ ಗಂಗಾಧರ್, ಸಿರಿ ಗಂಧ ಗುರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದು, ಸಾಂಸ್ಕೃತಿಕ ಚಟುವಟಿಕೆ, ದೇಶಭಕ್ತಿ ಗೀತೆ ಕಾರ್ಯಕ್ರಮ ಇರಲಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ, ಧರ್ಮಸ್ಥಳ ಸ್ವಸಹಾಯ ಸಂಘ ಸೇರಿದಂತೆ 24 ಸಂಘಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕಾರ್ಯಕ್ರಮದ ನಂತರ ಸರ್ವರಿಗೂ ಪ್ರಸಾದ ವ್ಯವಸ್ಥೆ ಇರುತ್ತದೆ, ಸಮಾಜೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಳ್ಳಬೇಕೆಂದು ಲೋಕೇಶ್ವರ್ ಕೋರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಮಾಜಿ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರಾದ ತರಕಾರಿ ಗಂಗಾಧರ್, ಭಾರತಿ ಮಂಜುನಾಥ್, ಸಮಾಜೋತ್ಸವ ಸಮಿತಿ ಮುಖಂಡರಾದ ಸಿರಿಗಂಧ ಗುರು, ನಟರಾಜ್, ಬಾಬು ಪಟೇಲ್, ಸುದರ್ಶನ್ ಬಾಬು ಮತ್ತಿತರರು ಇದ್ದರು.
