ಸನಾತನ ಪರಂಪರೆಯನ್ನು ಅಂಗೀಕರಿಸುವ ಮುಸ್ಲಿಮರನ್ನು ಕುಂಭಮೇಳಕ್ಕೆ ಸ್ವಾಗತಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆದರೆ ಕೆಟ್ಟ ಉದ್ದೇಶದೊಂದಿಗೆ ಬರುವವರಿಗೆ ಸೂಕ್ತ ಉತ್ತರ ಕೊಡಲು ತಯಾರಿಯನ್ನು ನಡೆಸಿದ್ದೇವೆ ಎಂದೂ ಅವರು ಹೇಳಿದ್ದಾರೆ. ಇದಕ್ಕಿಂತ ಮೊದಲು ಮುಸ್ಲಿಮರು ಕುಂಭಮೇಳಕ್ಕೆ ಬರುವುದನ್ನು ತಡೆಯಬೇಕು ಎಂದು ಅಖಾಡ ಪರಿಷತ್ ಆಗ್ರಹಿಸಿತ್ತು.
ಮುಸ್ಲಿಮರನ್ನು ಕುಂಭಮೇಳದಿಂದ ಹೊರಗಿಡಬೇಕು ಎಂದು ಅಖಾಡ ಪರಿಷತ್ ಒತ್ತಾಯಿಸಿರುವುದಕ್ಕೆ ಮುಸ್ಲಿಂ ಧರ್ಮಗುರು ಒಬ್ಬರು ವಿರೋಧ ವ್ಯಕ್ತಪಡಿಸಿ ರಂಗಕ್ಕೆ ಇಳಿದಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರನ್ನೂ ಒಳಗೊಳಿಸಬೇಕು ಎಂದವರು ಹೇಳಿಕೆ ನೀಡಿದ್ದರು. ಇದರ ಬೆನ್ನಿಗೆ ಯೋಗಿ ಆದಿತ್ಯನಾಥ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಹಾ ಕುಂಭಮೇಳ ನಡೆಯುತ್ತಿರುವ ಜಾಗ ವಕ್ಫ್ ಭೂಮಿಯಾಗಿದೆ ಎಂಬ ವಾದವನ್ನು ಯೋಗಿ ಆದಿತ್ಯನಾಥ್ ನಿರಾಕರಿಸಿದ್ದಾರೆ. ಒಂದು ಕಟ್ಟಡದ ಮೂಲ ಯಾವುದು ಅನ್ನುವುದನ್ನು ಹುಡುಕುವುದರಲ್ಲಿ ತಪ್ಪಿಲ್ಲ. ಯಾವುದು ವಿವಾದದಲ್ಲಿದೆಯೋ ಅದನ್ನು ಮಸೀದಿ ಎಂದು ಹೇಳಬಾರದು ಎಂದು ಅವರು ಹೇಳಿದ್ದಾರೆ.

