ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಸಾಕ್ಷಿ ದೂರುದಾರನೊಬ್ಬ ನೀಡಿದ ದೂರಿನ ತನಿಖೆಯನ್ನ ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸ್ತಾ ಇದ್ದಾರೆ. ಇದೇ ವೇಳೆ ದೂರುದಾರ ಚಿನ್ನಯ್ಯ ನೀಡಿದ ಬುರುಡೆಯ ಮೂಲವನ್ನು ಕಂಡು ಹಿಡಿಯುವಲ್ಲಿ ಎಸ್ ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತ ಚಿನ್ನಯ್ಯಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ಬಂಗ್ಲಗುಡ್ಡೆ ಕಾಡಿನ ಬಳಿ ಎಸ್ ಐಟಿ ಮತ್ತೆ ಪರಿಶೀಲನೆಗೆ ಇಳಿದಿದೆ.
ಬಂಗ್ಲಗುಡ್ಡೆ ಕಾಡಿನ ಬಳಿ ಎಸ್ ಐಟಿ ಏನು ಪರಿಶೀಲನೆ ನಡೆಸಿತು ಎನ್ನುವುದನ್ನ ಎಸ್ ಐಟಿ ಅಧಿಕಾರಿಗಳು ಇನ್ನೂ ಬಹಿರಂಗ ಪಡಿಸಿಲ್ಲ. ಆದರೂ ಸೌಜನ್ಯ ಮಾವ ವಿಠ್ಠಲ ಗೌಡ ಅವರು ಚಿನ್ನಯ್ಯನಿಗೆ ಬುರುಡೆ ತೆಗೆಯಲು ಸಹಾಯ ಮಾಡಿದ್ದಾರೆ, ಈ ಕಾರಣಕ್ಕಾಗಿ ಸ್ಥಳ ಮಹಜರು ನಡೆಸಲಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಮಾಧ್ಯಮಗಳ ವರದಿ ಸುಳ್ಳು?:
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸುದ್ದಿಗಳು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದೆ. ಆರಂಭದಲ್ಲಿ ಬುರುಡೆಯನ್ನ ಜಯಂತ್ ಟಿ. ಚಿನ್ನಯ್ಯಗೆ ಕೊಟ್ಟಿದ್ದರು ಅಂತ ಸುದ್ದಿವಾಹಿನಿಗಳಲ್ಲಿ ವರದಿಯಾಗಿತ್ತು. ನಂತರ ಗಿರೀಶ್ ಮಟ್ಟಣನವರ್ ಕೊಟ್ಟಿದ್ದರು ಅಂತ ಸುದ್ದಿಗಳಾಗಿತ್ತು. ಬಳಿಕ ಯೂಟ್ಯೂಬರ್ ಅಭಿ ಮೇಲೆಯೂ ಕೆಲವರು ಆರೋಪಗಳನ್ನ ಮಾಡಿದ್ದರು. ಇದೀಗ ಸೌಜನ್ಯ ಮಾವ ವಿಠ್ಠಲ ಗೌಡ ಅವರು ಬುರುಡೆ ನೀಡಿದ್ದರು ಅಂತ ವರದಿಯಾಗಿದೆ. ಒಟ್ಟಿನಲ್ಲಿ ಎಸ್ ಐಟಿ ತನಿಖೆ ಮುಗಿಯುವವರೆಗೂ ಈ ಪ್ರಕರಣದಲ್ಲಿ ಹೀಗೆಯೇ ನಡೆದಿದೆ ಎಂದು ಹೇಳುವುದು ಕೇವಲ ಕಾಲ್ಪನಿಕವಾಗಬಹುದು. ಎಸ್ ಐಟಿ ಅಧಿಕಾರಿಗಳು ತನಿಖೆಯ ಯಾವುದೇ ಅಂಶವನ್ನ ಬಹಿರಂಗಪಡಿಸಿಲ್ಲ.

