
ಗುಡೇಕೋಟೆ: ಮಳೆ ಗಾಳಿ ಗುಡುಗಿನಿಂದ ರಕ್ಷಣೆ ಪಡೆಯಲು ಮರದ ಆಸರೆ ಪಡೆದ ಕುರಿಗಾಹಿ ಸಿಡಿಲಿಗೆ ಬಲಿಯಾದ ಘಟನೆ ಕೂಡ್ಲಿಗಿ ತಾಲೂಕಿನ ಯರ್ರೋಬಯ್ಯನಹಟ್ಟಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ.
ಗುಡೇಕೋಟೆ ಸಮೀಪದ ಯರ್ರೋಬಯ್ಯನಹಟ್ಟಿ ನಿವಾಸಿಯಾದ ಎಸ್.ಬೋರಯ್ಯ (36) ಮೃತ ದುರ್ದೈವಿಗಳು.
ಈತನು ಎಂದಿನಂತೆ ತನ್ನ ಕುರಿಗಳನ್ನು ಮೇಯಿಸಲು ಅರಣ್ಯಕ್ಕೆ ಹೋಗುತ್ತಿದ್ದು,ಸಂಜೆ ಬರುವ ವೇಳೆ ಕಾರ್ಮೋಡ ಕವಿದು ಭಯಂಕರ ಮಳೆ ಸುರಿದಿದೆ. ಗುಡುಗು ಸಿಡಿಲು ಅಬ್ಬರಿಸಿ ಏಕಾಏಕಿ ಮಳೆ ಆರಂಭವಾಗಿದೆ. ರಕ್ಷಣೆ ಪಡೆಯಲು ಕೆಂಜಲುಗುಂಟೆ ಸಮೀಪದ ನೀರಿನ ಬಳಿ ಮರದ ಆಸರೆ ಪಡೆದಿದ್ದರು ಎನ್ನಲಾಗಿದೆ.
ಈ ವೇಳೆ ಸಿಡಿಲು ಬಡಿದು ಎಸ್.ಬೋರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈತನಿಗೆ ಇಬ್ಬರು ಗಂಡು ಮಕ್ಕಳು, ಪತ್ನಿ ಈಗ ಗರ್ಭಿಣಿಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಗುಡೇಕೋಟೆ ಪೋಲೀಸ್ ಠಾಣೆಯ ಪಿಎಸ್ಐ ಸುಬ್ರಮಣ್ಯಂ ಜಿ,ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
