ಸಿರಿಯಾದಲ್ಲಿ ಬಂಡುಕೋರ ಪಡೆಯು ಅಧಿಕಾರವನ್ನು ವಶಪಡಿಸಿದ ಬೆನ್ನಿಗೇ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ. ಸಿರಿಯಾದ ರಾಜಧಾನಿ ದಮಾಸ್ಕಸ್ ನ ಒಂದು ಸುರಕ್ಷಿತ ಕೇಂದ್ರದಲ್ಲಿ ಮಿಸೈಲ್ ಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಇರಾನ್ ಉಪಯೋಗಿಸುತ್ತಿದ್ದ ಸಂಶೋಧನಾ ಕೇಂದ್ರದ ಮೇಲೆ ಇಸ್ರೇಲ್ ಬಾಂಬ ದಾಳಿ ನಡೆಸಿದೆ. ಇದರಿಂದಾಗಿ ಶಸ್ತ್ರಾಸ್ತ್ರ ಸಂಶೋಧನಾ ಕೇಂದ್ರಕ್ಕೆ ಭಾರಿ ನಾಶ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಹಲವು ವರ್ಷಗಳಿಂದ ಸಿರಿಯ ಸಂರಕ್ಷಿಸಿ ಇಟ್ಟಿದ್ದ ರಾಸಾಯನಿಕ ಆಯುಧಗಳು ಮತ್ತು ಇನ್ನಿತರ ನಿಷೇಧಿತ ಯುದ್ಧ ಸಾಮಗ್ರಿಗಳು, ಮಿಸೈಲ್ ಗಳು ಈ ಬಂಡುಕೋರರ ವಶಕ್ಕೆ ಸಿಗದಂತೆ ತಡೆಯುವ ಉದ್ದೇಶದಿಂದ ಇಸ್ರೇಲ್ ಈ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಹಯಾತ್ ತಹರೀರ್ ಅಲ್ ಶಾಮ್ ಎಂಬ ಬಂಡುಕೋರ ಪಡೆಯು ರಕ್ತರಹಿತ ಕ್ರಾಂತಿಯ ಮೂಲಕ ಸಿರಿಯಾವನ್ನು ವಶಪಡಿಸಿಕೊಂಡಿದೆ. ಈ ಘಟನೆಗಿಂತ ಸ್ವಲ್ಪ ಮೊದಲು ಅಧ್ಯಕ್ಷ ಅಸದ್ ಅವರು ತನ್ನ ಕುಟುಂಬದೊಂದಿಗೆ ರಷ್ಯಾಕ್ಕೆ ಪಲಾಯನ ಮಾಡಿದ್ದಾರೆ. ಅಸದ್ ಅವರ ಪದಚ್ಯುತಿಯನ್ನು ಸಿರಿಯನ್ ನಾಗರಿಕರು ಬೀದಿಗಿಳಿದು ಸಂಭ್ರಮಿಸಿದ್ದಾರೆ. ಅಸದ್ ಅವರು ಜೈಲಿಗೆ ತಳ್ಳಿದ್ದ ಸಾವಿರಾರು ಭಿನ್ನಮತೀಯರನ್ನು ಬಂಡುಕೋರ ಪಡೆ ಬಂಧ ಮುಕ್ತಗೊಳಿಸಿದೆ.

