ನವದೆಹಲಿ: ರೈಲ್ವೆ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ. ರಾತ್ರಿ 9.55 ರ ಸುಮಾರಿಗೆ, ಪ್ರಯಾಗ್ ರಾಜ್ ಗೆ ಹೋಗುವ ರೈಲನ್ನು ಹತ್ತಲು ಅಲ್ಪಾವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ಪ್ಲಾಟ್ ಫಾರ್ಮ್ ಸಂಖ್ಯೆ 14-15 ರಲ್ಲಿ ಗೊಂದಲ ಉಂಟಾಯಿತು.
ಮೃತಪಟ್ಟ 18 ಜನರಲ್ಲಿ 11 ಮಹಿಳೆಯರು ಮತ್ತು 5 ಮಕ್ಕಳು ಸೇರಿದ್ದಾರೆ. ಗಾಯಗೊಂಡವರನ್ನು ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆ ಮತ್ತು ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, “ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದಿಂದ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ನನ್ನ ಸಂತಾಪವಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಕಾಲ್ತುಳಿತದಿಂದ ಬಾಧಿತರಾದ ಎಲ್ಲರಿಗೂ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ’ ಎಂದಿದ್ದಾರೆ.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಉಂಟಾದ ಪ್ರಯಾಣಿಕರ ಭಾರೀ ನೂಕುನುಗ್ಗಲು ಈ ಭೀಕರ ಕಾಲ್ತುಳಿತಕ್ಕೆ ಕಾರಣವಾಯಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ಲ್ಯಾಟ್ ಫಾರ್ಮ್ಗಳಲ್ಲಿ ಉಸಿರುಗಟ್ಟಿಸುವ ಜನಸಮೂಹವು ಗುಂಪುಗೂಡಿದ್ದರಿಂದ ಗೊಂದಲ ಭುಗಿಲೆದ್ದಿತು.ಇದರಿಂದಾಗಿ ಅನೇಕ ಪ್ರಯಾಣಿಕರು ಮೂರ್ಛೆ ಹೋಗಿದ್ದರು.

