ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ: ನಾಲ್ವರು ಆರೋಪಿತರನ್ನು ಬಂಧಿಸಿದ ಸಿಬಿಐ

ಭಾಸ್ಕರ ಪತ್ರಿಕೆ
0

ತಿರುಮಲ ಶ್ರೀವಾರಿ ಲಡ್ಡಿನಲ್ಲಿ ತುಪ್ಪದ ಕಲಬೆರಕೆ ಮಾಡಲಾದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ನಾಲ್ವರನ್ನು ಬಂಧಿಸಿದೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯ ಭಾಗವಾಗಿ ಈ ಬಂಧನ ನಡೆದಿವೆ. ಈ ಪ್ರಕರಣದ ತನಿಖೆಗಾಗಿ ಸಿಬಿಐ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು. ಬಂಧಿತರು ತಮಿಳುನಾಡಿನ ಎಆರ್ ಡೈರಿ, ಉತ್ತರ ಪ್ರದೇಶದ ಪರಾಗ್ ಡೈರಿ, ಪ್ರೀಮಿಯರ್ ಅಗ್ರಿ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್ ಸೇರಿದಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ತುಪ್ಪ ಪೂರೈಸುವ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಟಿಡಿಪಿ ತಿಳಿಸಿದೆ.

ತುಪ್ಪ ಪೂರೈಕೆ ಸರಪಳಿಯ ಪ್ರತಿಯೊಂದು ಹಂತದಲ್ಲೂ ಗಂಭೀರ ಉಲ್ಲಂಘನೆ ಆಗಿರುವುದನ್ನು ಎಸ್ಐಟಿ ಕಂಡುಕೊಂಡಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ತನಿಖೆಯ ಪ್ರಕಾರ, ವೈಷ್ಣವಿ ಡೈರಿ ಅಧಿಕಾರಿಗಳು ದೇವಾಲಯಕ್ಕೆ ತುಪ್ಪವನ್ನು ಪೂರೈಸಲು ಎಆರ್ ಡೈರಿ ಹೆಸರನ್ನು ಬಳಸಿಕೊಂಡು ಟೆಂಡರ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ತಿರುಚಲು ನಕಲಿ ದಾಖಲೆಗಳನ್ನು ರಚಿಸುವಲ್ಲಿಯೂ ಅವರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*