ತಿಪಟೂರು: ನಗರದ ಹೆಸರಾಂತ ವೈದ್ಯ ಮತ್ತು ಸಮಾಜ ಸೇವಕ ತಿಪಟೂರಿನ ಡಾ.ಜಿ.ಎಸ್. ಶ್ರೀಧರ್ರವರಿಗೆ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ದಿ ರಿಡ್ಜ್ ಕಾರ್ಲ್ಟರ್ನ್ ಪಂಚತಾರ ಹೋಟೆಲ್ನಲ್ಲಿ ನಡೆದ ಖಾಸಗಿ ವಾಹಿನಿ ನೀಡುವ ಅಚವರ್ಸ್ ಅವಾರ್ಡ್- 2025ರ ಸಮಾರಂಭದಲ್ಲಿ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಡಾ. ಶ್ರೀಧರ್ ರವರ ಸತತ 30 ವರ್ಷಗಳ ದೀರ್ಘಕಾಲದ ಸಮಾಜ ಸೇವೆಯನ್ನು ಗುರ್ತಿಸಿ ಝೀ ಕನ್ನಡ ಆಚವರ್ಸ್ ಅವಾರ್ಡ್ - 2025ರ ಪ್ರಶಸ್ತಿ ನೀಡಿ, ಪುರಸ್ಕರಿಸಿದೆ. ಬಡ ರೋಗಿಗಳ ಪಾಲಿಗೆ ಆರಾಧ್ಯ ದೈವ ಎಂದೇ ಹೆಸರಾದ ಡಾ. ಶ್ರೀಧರ್ ನಿತ್ಯ ನೂರಾರು ಜನರಿಗೆ ಬಿಸಿ ಊಟ ನೀಡುವ ಮೂಲಕ ಈಗ ದಾಸೋಹಿ ಎನಿಸಿದ್ದಾರೆ. ಕೊರೋನಾ ಸಮಯದಲ್ಲಿ ಸಾವಿರಾರು ಜನರಿಗೆ ಊಟದ ಜೊತೆಗೆ ಉಚಿತ ಚಿಕಿತ್ಸೆ ನೀಡಿ ಪ್ರಾಣ ಉಳಿಸಿ ರಾಜ್ಯಾದ್ಯಂತ ಹೆಸರಾಗಿದ್ದ ಇವರು ಪ್ರತಿ ವರ್ಷ ಸಾವಿರಾರು ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ, ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಶಿಕ್ಷಣ, ಮಾಧ್ಯಮ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ, ವೈಜ್ಞಾನಿಕ ಹಾಗೂ ಸಮಾಜ ಸೇವೆಯಲ್ಲೂ ಮುಂದಿದ್ದಾರೆ.
ಇವರ ದೀರ್ಘ ಸಮಾಜ ಸೇವೆಯನ್ನು ಗುರುತಿಸಿ ಈ ಬಾರಿಯ ಅಚೀವರ್ಸ್ ಅವಾರ್ಡ್ ಪ್ರಶಸ್ತಿಯನ್ನು ಆದಿಚುಂಚನಗಿರಿ ಶ್ರೀ ನಿರ್ಮಲಾನಂದಾ ಸ್ವಾಮೀಜಿ ರವರ ಸಾನಿಧ್ಯದಲ್ಲಿ ಮಾಜಿ ಸಚಿವ ಸದಾನಂದಗೌಡ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಝೀ ನ್ಯೂಸ್ ಮುಖ್ಯಸ್ಥ ರವಿ ಗೌಡ, ನಟಿ ಪ್ರಿಯಾಂಕ ಉಪೇಂದ್ರ, ನಟ ಧ್ರುವ ಸರ್ಜಾ, ಡಾ.ರಾಜ್ ಕುಮಾರ್ ಮಕ್ಕಳಾದ ಲಕ್ಷ್ಮಿ ಗೋವಿಂದ ರಾಜು, ಪೂರ್ಣಿಮಾ ರಾಮ ಕುಮಾರ್ ಮತ್ತು ಅಳಿಯ ಗೋವಿಂದ ರಾಜ್ ಸೇರಿದಂತೆ ಜೀ ನ್ಯೂಸ್ ಸಿಬ್ಬಂದಿ ವರ್ಗ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಇವರಿಗೆ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ತಾಲ್ಲೂಕು ಘಟಕದ ಸರ್ವಸದಸ್ಯರು ಹಾಗೂ ಭಾಸ್ಕರ ಪತ್ರಕಾ ಬಳಗ ಅಭಿನಂದನೆ ಸಲ್ಲಿಸಿದೆ.
