
ಕೊಪ್ಪಳ: ಶನಿವಾರದಂದು ಸಾಯಂಕಾಲ ಸುರಿದ ಧಾರಾಕಾರ ಮಳೆಗೆ ಜಮೀನಿನ ನೀರು ಗ್ರಾಮದೊಳಗೆ ನುಗ್ಗಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತಾಯಿತು.
ಕುಕನೂರು ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ಶನಿವಾರದಂದು ಸಾಯಂಕಾಲ ಸುರಿದ ಭಾರಿ ಮಳೆಯಿಂದಾಗಿ ಗ್ರಾಮದೊಳಗೆ ಹೊಲಗಳಿಂದ ನೀರು ನುಗ್ಗಿ ಸಾರ್ವಜನಿಕರ ಅನೇಕ ಕುಟುಂಬಗಳಿಗೆ ಮನೆಯಲ್ಲಿ ನೀರು ಮಡುಗಟ್ಟಿ ನಿಲ್ಲುವಂತಾಯಿತು.
ಗ್ರಾಮದಲ್ಲಿ ಇತ್ತೀಚಿಗೆ ಜೆಜೆ ಎಂ ಕಾಮಗಾರಿಯಾಗಿದ್ದು ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದರಿಂದ ಸೀಮೆಯಿಂದ ಬರುವ ನೀರು ನಾಲೆಗಳಿಗೆ ಸರಳವಾಗಿ ಹೋಗುವ ಮಾರ್ಗ ಮಧ್ಯೆ ಅಡ್ಡಲಾಗಿ ಜೆಜೆಎಂ ಕಾಮಗಾರಿ ಮಾಡಿದ್ದರಿಂದ ನೀರು ಹೋಗುವ ದಾರಿಗೆ ಮೂರು ವಾಲ್ ಸೆಟ್ಟಿಂಗ್ ಚೆಂಬರ್ ಕಟ್ಟಿದ್ದು ಇದು ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.
ನೀರು ಹರಿದು ಹೋಗಲು ಸುಗಮ ಮಾರ್ಗವಿಲ್ಲದೇ ಇರುವದರಿಂದ ಸಾರ್ವಜನಿಕರು ಫಜೀತಿಗೆ ಸಿಲುಕುವಂತಾಗಿ ಮಳೆ ನೀರು ಮನೆಯೊಳಗೆ ನುಗ್ಗಿದೆ ಎಂದು ಆರೋಪಿಸಿದರು. ಇದಕ್ಕೂ ಮೊದಲು ಸುರಿದ ಮಳೆಗೂ ಕೂಡಾ ಇದೇ ರೀತಿ ಮಳೆ ನೀರು ನುಗ್ಗಿತ್ತು ಎಂದು ಗ್ರಾಮಸ್ಥರು ತಿಳಿಸಿದರು.
ಈ ಕುರಿತು ಸಂಬಂಧಿಸಿಧ ಇಲಾಖೆ ಅಧಿಕಾರಿಗಳಿಗೆ ಹಾಗೂ ಯಲಬುರ್ಗಾ ತಾಲೂಕ ಕಚೇರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೌಖಿಕವಾಗಿ ಮತ್ತು ನೇರವಾಗಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲಾ ಎಂದು ಗ್ರಾಮಸ್ಥರು ದೂರಿದರು.
ನಾವು ಈ ಕುರಿತು ಗಮನಕ್ಕೆ ತಂದಾಗ ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅಧಿಕಾರಿಗಳು ಇಲ್ಲಿವರೆಗಾದರು ಗ್ರಾಮದ ಹತ್ತಿರ ಸುಳಿದಿರುವುದಿಲ್ಲಾ. ಈ ಕುರಿತಂತೆ ಗ್ರಾಮ ಪಂಚಾಯತಿಗೂ ಸಹ ಮನವಿ ಸಲ್ಲಿಸಲಾಯಿತು.
ಈ ಕಾಮಗಾರಿಯು ಗ್ರಾಮ ಪಂಚಾಯತಿಯ ಹಸ್ತಾಂತರವಾಗಿರದ ಕಾರಣ ಅವರು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಉತ್ತರಿಸುತ್ತಾರೆ ಎಂದು ಗ್ರಾಮದವರು ತಿಳಿಸಿದರು.
ಗ್ರಾಮದಲ್ಲಿರುವ ಕುಡಿಯುವ ನೀರಿನ ತೊಟ್ಟಿಯ ಸುತ್ತಲೂ ಕೊಳಚೆ ನೀರು ತುಂಬಿಕೊಂಡಿದ್ದು ಅದೇ ನೀರನ್ನು ಸಾರ್ವಜನಿಕರು ಕುಡಿಯುವಂತಾಗಿದೆ.
ಇಂತಹ ಕಲ್ಮಶ ನೀರು ಬಳಕೆ ಮಾಡುವುದರಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೊಡಿಕೊಂಡರು.
ಈ ಕುರಿತು ಸಂಬಂಧಿಸಿದ ತಾಲೂಕ ಅಧಿಕಾರಿಗಳು, ಜನ ಪ್ರತಿನಿಧಿಗಳು ಗಮನ ಹರಿಸಿ ಗ್ರಾಮಸ್ಥರಿಗೆ ಇರುವ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
