ಪಿಡಿಓ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಕ್ಷೇಮಾಭಿವೃದ್ಧಿ ಸಂಘ ಒತ್ತಾಯ

ಭಾಸ್ಕರ ಪತ್ರಿಕೆ
0
ಗಂಗಾವತಿ: ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ಪಿಡಿಓ ರತ್ನಮ್ಮ ಗುಂಡಣ್ಣನವರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಾಗೂ ತಾಲೂಕು ನೌಕರರ ಸಂಘದವರು ತಹಸೀಲ್ದಾರ್ ಕಚೇರಿ ಹಾಗೂ ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಶನಿವಾರ ಮನವಿ ಸಲ್ಲಿಸಿದರು. 
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷರಾದ ನಾಗೇಶ ಕುರಡಿ ಅವರು ಮಾತನಾಡಿ, ಹಿರೇಮ್ಯಾಗೇರಿ ಗ್ರಾಪಂ ಮಹಿಳಾ ಪಿಡಿಓ ರತ್ನಮ್ಮ ಗುಂಡಣ್ಣನವರ್ ಅವರ ಮೇಲೆ ಅದೇ ಗ್ರಾಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ್ ಹಾಗೂ ಅವರ ಮಗ ಹಲ್ಲೆ ಮಾಡಿದ್ದಾರೆ. ನಮೂನೆ 9-11ಎ ವಿಷಯವಾಗಿ ಪಿಡಿಓ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆ ಮಾಡಿದ್ದಾರೆ. ಇಂಥ ಘಟನೆಯಿಂದ ಗ್ರಾಪಂ ಪಿಡಿಓಗಳು ಹಾಗೂ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿದೆ. ಎಲ್ಲ ಅಧಿಕಾರಿಗಳು ಹಾಗೂ ನೌಕರರಿಗೆ ಕಚೇರಿ ಸಮಯದಲ್ಲಿ ಸೂಕ್ತ ಭದ್ರತೆ ಮತ್ತು ರಕ್ಷಣೆ ವ್ಯವಸ್ಥೆ ಕಲ್ಪಿಸಬೇಕು. 
ಹಲ್ಲೆ ಮಾಡಿದವರ ಸದಸ್ಯತ್ವ ರದ್ದುಗೊಳಿಸಬೇಕು. ಹಲ್ಲೆಗೈದ ಇತರ ವ್ಯಕ್ತಿಗಳ ಮೇಲೆ ರೌಡಿಶೀಟರ್ ಓಪನ್ ಮಾಡಬೇಕು. ಇವರು ಜೀವಿತಾವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು. ಸಂತ್ರಸ್ತ ಪಿಡಿಓ ವಿರುದ್ಧ ಕೌಂಟರ್ ಕೇಸ್ ದಾಖಲಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಆರ್ ಡಿಪಿಆರ್ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ನೌಕರರಿಗೆ ಕಚೇರಿ ಕೆಲಸಗಳನ್ನು ನೆಮ್ಮದಿಯಿಂದ ನಿರ್ವಹಿಸಲು ಸೂಕ್ತ ವಾತಾವರಣ ನಿರ್ಮಿಸುವಂತೆ ಒತ್ತಾಯಿಸಿದರು.
ವಿವಿಧ ಗ್ರಾ.ಪಂ.ಗಳ ಪಿಡಿಓಗಳಾದ ಸುರೇಶ ಚಲವಾದಿ, ಶಂಷೀರ್ ಅಲಿ, ವಿದ್ಯಾವತಿ, ಇಂದಿರಾ, ವತ್ಸಲಾ, ಕಾರ್ಯದರ್ಶಿಗಳಾದ ರವಿಶಾಸ್ತ್ರಿ, ರವೀಂದ್ರ ಕುಲಕರ್ಣಿ, ಈಶಪ್ಪ, ಕರ್ನಾಟಕ ಸರಕಾರಿ ನೌಕರರ ಸಂಘದ ತಾಲೂಕು ಖಜಾಂಚಿಗಳಾದ ಶ್ರೀನಿವಾಸ್, ದ್ವಿ.ದ.ಲೆ.ಸ‌. ಪ್ರಶಾಂತ ಹಾಗೂ ತಾಪಂ ಸಿಬ್ಬಂದಿಗಳಾದ ಶಿವಮೂರ್ತಿ ಹಿರೇಮಠ, ಹನುಮೇಶ, ನರೇಗಾ ಸಿಬ್ಬಂದಿಗಳು, ತಾಪಂ ಸಿಬ್ಬಂದಿಗಳು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*