ಬೆಂಗಳೂರು: ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಅಥವಾ ರೂಪಿಸಲ್ಪಟ್ಟಿರದ ಸೈಟ್ಗಳಿಗೆ ‘ಬಿ ಖಾತಾ’ನೀಡುವುದನ್ನು ಬಿಬಿಎಂಪಿ ಸ್ಥಗಿತಗೊಳಿಸುವ ಸಾಧ್ಯತೆ ಇದೆಯೆಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸುಳಿವು ನೀಡಿದ್ದಾರೆ.
ಬಿ ಖಾತಾ ಬದಲಿಗೆ ‘ಎ ಖಾತಾ’ ?
ಬಿ ಖಾತಾ ನೀಡುವುದರ ಬದಲಿಗೆ, ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಿ ‘ಎ ಖಾತಾ’ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಉದ್ಯಾನವನಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಸಣ್ಣ ಸೈಟ್ಗಳಿಂದ ಅವುಗಳ ಗೈಡೆನ್ಸ್ ವ್ಯಾಲ್ಯೂವಿನ 5% ಮತ್ತು ದೊಡ್ಡ ಸೈಟ್ಗಳಿಂದ ಅವುಗಳ ಗೈಡೆನ್ಸ್ ವ್ಯಾಲ್ಯೂವಿನ 15% ರಷ್ಟು ಮೊತ್ತವನ್ನು ಸಂಗ್ರಹಿಸುವ ಬಗ್ಗೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಮುಂದಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.ಬಿ ಖಾತಾ ನೀಡುವುದನ್ನು ನಿಲ್ಲಿಸುವ ಪ್ರಸ್ತಾವ ಇದೆ. ಕಟ್ಟಡ ಯೋಜನೆ ಅನುಮೋದನೆಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಸ್ತಾವನೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
